ಲೇಖಕರು: ಎಸ್. ಸೀತಾರಾಮು ಬೆಲೆ: 270/- ಪುಟಗಳು: 288 ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು ............................... ನಾನು ಸುಮಾರು ಅರವತ್ತು ವರುಷಗಳ ಹಿಂದೆ ಮೈಸೂರಿನಲ್ಲಿದ್ದಾಗ ನಮ್ಮ ತಂದೆಯವರ ಉತ್ತರಾದಿ ಸಂಗೀತದ ಆಸಕ್ತಿಯಿಂದಾಗಿ ಬೆಳಿಗ್ಗೆ ಆರು ಗಂಟೆಗೆಲ್ಲಾ ಆಕಾಶವಾಣಿಯಲ್ಲಿ ಬಿತ್ತರಗೊಳುತ್ತಿದ್ದ ಮರಾಠಿಯ ಅಭಂಗ್ಗಳು, ಕಬೀರದಾಸರ ದೋಹಾಗಳು, ಪಂ. ಮಲ್ಲಿಕಾರ್ಜುನ ಮನಸ್ಸೂರ್, ಪಂ. ಬಸವರಾಜ ರಾಜಗುರು ಅವರುಗಳ ವಚನಗಳು, ಹಾಗೂ ಗುರುಬಾಣಿಯನ್ನು ಕೇಳುತ್ತಾ ಸಂತೋಷಪಡುತ್ತಿದ್ದೆ. ಅದರಲ್ಲೂ ಗುರುಬಾಣಿಯ ಭಾಷೆ ನನಗೆ ತಿಳಿಯುತ್ತಿರಲಿಲ್ಲವಾದರೂ ಅದರಲ್ಲಿದ್ದ ಒಂದು ಆಧ್ಯಾತ್ಮಿಕ ಮಾದಕತೆ ನನ್ನನ್ನ ಸೆಳೆಯುತ್ತಿತ್ತು. ನಮ್ಮ ಏಳನೇ ತರಗತಿಯ ಪಠ್ಯದಲ್ಲಿದ್ದ ಮಹಾರಾಜಾ ರಣಜೀತ ಸಿಂಗರ ಚಿತ್ರವಿದ್ದ ಒಂದು ಪಾಠ ಓದಿ ಸಿಖ್ ಧರ್ಮ ಮತ್ತು ಸಿಖ್ ಜನರ ಬಗ್ಗೆ ಗೌರವವೂ ಮೂಡಿತ್ತು. ನಂತರ ನಾನು ಕಾಲೇಜಿನಲ್ಲಿ ಓದುವಾಗ ಶ್ರೀ ಗುರು ನಾನಕ ದೇವರ ದೇವರು ಒಬ್ಬನೇ’ ಎನ್ನುವ ಮಾತು, ಜೀವನದ ಗುರಿ, ಲೋಕಸೇವೆ, ಭ್ರಾತೃಪ್ರೇಮ, ದೇಶ ಭಕ್ತಿ, ದೈವ ಪ್ರೇಮಗಳ ಸಂದೇಶಗಳು ಮತ್ತು ಹಿಂದೂ ಧರ್ಮ ಹಾಗೂ ಇಸ್ಲಾಂ ಧರ್ಮಗಳ ಶ್ರೇಷ್ಠ ತತ್ವಗಳನ್ನು ಸ್ವೀಕರಿಸಿದ್ದರು ಎನ್ನುವ ವಿಷಯ ನನಗೆ ಬಹಳ ಪ್ರಿಯವಾಗಿ ಕಂಡಿತ್ತು. ಆನಂತರ ನಾನು ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಉದ್ಯೋಗ ನಿಮಿತ್ತ ದೇಶದ ಹಲವಾರು ಸ್ಥಳಗಳಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಾಗ ಅಲ್ಲಿದ್ದ ಗುರುದ್ವಾರಗಳನ್ನು ದರ್ಶಿಸುತ್ತಿದ್ದೆ. ಕಾನಪುರ, ಲಖ್ನೌ, ರಾಂಪುರ, ದೆಹಲಿ, ಶಿಲ್ಲಾಂಗ್, ಹೈದರಾಬಾದ್, ಬೆಂಗಳೂರಿನ ಗುರುದ್ವಾರಗಳಲ್ಲದೆ ಕರ್ನಾಟಕದ ಪ್ರಸಿದ್ಧ ಸಿಖ್ಖರ ಕ್ಷೇತ್ರ ಬೀದರನ ನಾನಕ ಝೀರಾವನ್ನೂ ನೋಡಿ ಬಂದೆ. ಉತ್ತರ ಭಾರತದ ಪ್ರವಾಸ ಕೈಗೊಂಡಾಗ ಅಮೃತಸರ್ನ
ಹರಿ ಮಂದಿರ್ ಸಾಬ್’ನ್ನು ದರ್ಶಿಸಿದ್ದಷ್ಟೇ ಅಲ್ಲದೆ ಅತ್ಯಂತ ರಮಣೀಯವೂ, ಪ್ರಶಾಂತವೂ ಆದ ನಂಗಲ್ನಲ್ಲಿಯ ಗುರುದ್ವಾರವನ್ನೂ ನೋಡಿಬಂದೆ. ಇವು ಮತ್ತು ನನ್ನ ದೀರ್ಘ ಸೇವಾ ಅವಧಿಯಲ್ಲಿ ದೊರಕಿದ ಹಲವಾರು ಸಜ್ಜನ ಸಹೃದಯ ಸಿಖ್ ಮಿತ್ರರಿಂದ ಸಿಖ್ ಧರ್ಮ ಮತ್ತು ಜನರ ಬಗ್ಗೆ ವಿಶೇಷ ಗೌರವ ಉಂಟಾಯಿತು. ಈ ನಮ್ಮ ಪವಿತ್ರ ಭೂಮಿಯಲ್ಲೇ ಹುಟ್ಟಿ ಬೆಳೆದ ಮತ್ತೊಂದು ಶ್ರೇಷ್ಠ ಧರ್ಮ-ಸಿಖ್ ಧರ್ಮದ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನದಲ್ಲಿ ಅದರ ಸ್ಥಾಪಕ ಮಹಾನ್ ಪುರುಷ ಗುರು ನಾನಕರ ದಿವ್ಯ ಚರಿತ್ರೆಯನ್ನೂ ಅಧ್ಯಯನ ಮಾಡಿದೆ. ಹಾಗೆ ಓದಿಕೊಂಡದ್ದನ್ನು ಒಂದು ಸುಲಭ ಕನ್ನಡದಲ್ಲಿ ಸರಾಗವಾಗಿ ರಚಿಸಬೇಕೆನಿಸಿ ಈ ಕೃತಿಯನ್ನು ನಿಮ್ಮ ಮುಂದಿಟ್ಟಿದ್ದೇನೆ. -ಎಸ್. ಸೀತಾರಾಮು (ಲೇಖಕರ ಮಾತಿನಿಂದ)