ಮೂಲ ಲೇಖಕರು: ಷ. ಶೆಟ್ಟರ್ ಕನ್ನಡಕ್ಕೆ: ಸುಕನ್ಯಾ ಕನಾರಳ್ಳಿ ಪುಟಗಳು: 80, ಬೆಲೆ: 100/- ISBN: 978-81-944761-9-1 ಪ್ರಕಾಶನ: ಅಭಿನವ, ಬೆಂಗಳೂರು .......................... ಸಾಮಾನ್ಯವಾಗಿ ಶ್ರೀವೈಷ್ಣವ ಮತ್ತು ವೈಷ್ಣವ ಪಂಥಗಳು ರಾಮಾನುಜರು ಮತ್ತು ಮಧ್ವಾಚಾರ್ಯರ ನಂತರ ಪ್ರಸಿದ್ಧಿಗೆ ಬಂದವು ಎಂದು ತಿಳಿಯಲಾಗಿದೆ. ಆದರೆ ಬಾದಾಮಿ ಚಾಲುಕ್ಯರ ಕಾಲಕ್ಕಾಗಲೇ ವೈಷ್ಣವ ಪಂಥ ಪ್ರಸಿದ್ಧವಾಗಿತ್ತು. ಮಂಗಳೀಶನನ್ನು ಬಾದಾಮಿಯ ಒಂದು ಶಾಸನ ಪರಮಭಾಗವತ ಎಂದೇ ಕರೆದಿದೆ. ಬಾದಾಮಿಯ ವಿಷ್ಣುಗೃಹವೂ ಅವನ ಕಾಲದ ನಿರ್ಮಾಣ. ಕಾಲದಿಂದ ಕಾಲಕ್ಕೆ ತಾವು ಒಪ್ಪಿಕೊಂಡ ಪಂಥಗಳಲ್ಲಿ ಬದಲಾವಣೆಗಳನ್ನು ಕಾಣುವ ಪ್ರಯತ್ನ ನಡೆದಿರುತ್ತದೆ. ಅದು ಸಂಘರ್ಷದ ಕಾರಣದಿಂದ ಆದ ಬದಲಾವಣೆಯಲ್ಲ. ಬದಲಾದ ಸ್ವರೂಪಕ್ಕೆ ತಕ್ಕಂತೆ ಆಚರಣೆಗಳಲ್ಲಾದ ವ್ಯತ್ಯಾಸಗಳಿಗೆ ತಕ್ಕಂತೆ ಭಾಷೆಯ ಮೂಲಕ ಸಾಂಸ್ಕøತಿಕ ಸಾಮರಸ್ಯಕ್ಕೆ ಅಣಿಯಾಗುವುದು ಮುಖ್ಯವಾಗುತ್ತದೆ. ಈ ಬದಲಾವಣೆ ಆಯಾ ಪಂಥಗಳ ಅಂತರಂಗಕ್ಕೆ ಮುಖ್ಯವಾಗುತ್ತದೆಯೇ ಹೊರತು, ಇಡೀ ಸಮುದಾಯಕ್ಕಲ್ಲ. ಶ್ರೀವೈಷ್ಣವ ದೇವಾಲಯಗಳು ತಮಿಳು ಭಾಷೆಯ ಪ್ರಭಾವದಿಂದ ಪೂಜಾ ವಿಧಿವಿಧಾನಗಳಲ್ಲಿ ತಮಿಳು ಭಾಷೆಗೆ ಆದ್ಯತೆ ನೀಡಿದರೂ, ಸ್ಥಳೀಯ ಸಂಸ್ಕøತಿಯನ್ನು ಮರೆಯಲಿಲ್ಲ. ಕರ್ನಾಟಕಕ್ಕೆ ರಾಮಾನುಜ ಪೂರ್ವದಲ್ಲೇ ಕಣ್ವ ಮತ್ತು ಕಾವೇರಿ ನದಿಗಳ ದಂಡೆಯಲ್ಲೇ ಸಾಗಿ ಬಂದು, ಅಗ್ರಹಾರಗಳನ್ನು ಸ್ಥಾಪಿಸಿ, ವೇದಾಧ್ಯಯನ ಮತ್ತು ದೇವಾಲಯಗಳ ನಿರ್ವಹಣೆಗೆ ತೊಡಗಿಕೊಂಡ ಜನರು ವೈಷ್ಣವದಿಂದ ಶ್ರೀವೈಷ್ಣವದತ್ತ ಹೇಗೆ ಬದಲಾದರು ಎಂಬುದನ್ನು ಶಾಸನಗಳ ಮೂಲಕ ವಿಶ್ಲೇಷಿಸುವ ಆಸಕ್ತಿದಾಯಕ ಕೆಲಸವನ್ನು ಷ. ಶೆಟ್ಟರ್ ಅವರು ವೈಷ್ಣವದಿಂದ ಶ್ರೀವೈಷ್ಣವಕ್ಕೆ ಎಂಬ ಅಧ್ಯಯನದ ಮೂಲಕ ಮಾಡಿದ್ದಾರೆ. ಶಾಸನಗಳು ನೀಡುವ ಇಂತಹ ಸೂಕ್ಷ್ಮ ವಿಚಾರಗಳ ಬಗೆಗೇ ಹೆಚ್ಚು ಚಿಂತಿಸುತ್ತಿದ್ದ ಷ. ಶೆಟ್ಟರ್ ಸಾಮಾಜಿಕ, ಸಾಂಸ್ಕøತಿಕ ಮತ್ತು ಭಾಷಿಕ ಅಧ್ಯಯನಕ್ಕೆ ನೀಡಿರುವ ಮಹತ್ವದ ಕೊಡುಗೆಗಳ ಜೊತೆಗೆ ಇದೂ ಸೇರಿಕೊಳ್ಳುತ್ತದೆ. - ಎಚ್. ಎಸ್. ಗೋಪಾಲ ರಾವ್