ಲೇಖಕರು: ರಹಮತ್ ತರೀಕೆರೆ ಬೆಲೆ: 150/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ ..................... ಬಂಡಾಯ ಸಾಹಿತ್ಯವನ್ನು ಕುರಿತು ಗಾಢ ಬದ್ಧತೆಯ ಕೇಂದ್ರದಿಂದ ಹೊರಟು, ಸಮಗ್ರ ಕನ್ನಡ ಸಾಹಿತ್ಯವನ್ನು ಒಳಗು ಮಾಡಿಕೊಳ್ಳುವ ಮತ್ತು ಮರುಬೆಲೆ ಕಟ್ಟುವ ಉತ್ಸಾಹವನ್ನು ತೋರಿಸುತ್ತಿರುವ ವಿಮರ್ಶಕರಲ್ಲಿ, ರಹಮತ್ ತರೀಕೆರೆಯವರು ಪ್ರಮುಖರು. ಇದಕ್ಕೆ ಅಗತವಾದ ಪ್ರತಿಭೆ, ಪಾಂಡಿತ್ಯ ಮತ್ತು ಪರಿಕರಗಳನ್ನು ಅವರು ಸತತವಾಗಿ ಪಡೆದುಕೊಳ್ಳುತ್ತಿದ್ದಾರೆ. ಬಂಡಾಯ ಬರವಣಿಗೆಯ ಚೌಕಟ್ಟಿನೊಳಗಡೆಯೂ ಆತ್ಮವಿಮರ್ಶೆ ಮತ್ತು ತರ-ತಮ ವಿವೇಚನೆಯ ಬೀಜಗಳನ್ನು ಬಿತ್ತುತ್ತಿರುವುದು ಅವರ ಸಾಧನೆಯ ಇನ್ನೊಂದು ನೆಲೆ.
ರಹಮತ್ ಅವರಿಗೆ ಸಂಸ್ಕøತಿಯ ಬಹುಮುಖತೆ ಹಾಗೂ ಅದರ ಅಲಕ್ಷಿತ ನೆಲೆಗಳ ಹುಡುಕಾಟದಲ್ಲಿ ತೀವ್ರ ಆಸಕ್ತಿ. ಅಷ್ಟೇ ಅಲ್ಲ, ಇದುವರೆಗೆ ಆದರ್ಶವೆಂದು ಮಂಡಿತವಾದ ಸಂಸ್ಕøತಿ ವಿವರಗಳನ್ನು ಅವರು ನಿರಾಕರಿಸುತ್ತಾರೆ; ಹೆಚ್ಚು ಆರೋಗ್ಯಕರವಾದ ಪ್ರತಿಸಂಸ್ಕøತಿಯ ವಿವರಗಳನ್ನು ತೋರಿಸುತ್ತಾರೆ. ಅವರ ನಿಲುವುಗಳ ಹಿಂದೆ ನೋವಿನ ನಡುವೆಯೂ ಅರ್ಥವಂತಿಕೆ ಹಾಗೂ ಅಭಿಮಾನಗಳನ್ನು ಕಾಪಾಡಿಕೊಂಡ ಜೀವನಕ್ರಮವೊಂದರ ಒತ್ತಡ, ಒತ್ತಾಸೆಗಳಿವೆ.
ತಮ್ಮ ಸಂಸ್ಕøತಿ ಚಿಂತನೆಗೆ ಆಕಾರ ಕೊಡಲೆಂದು ಸಾಹಿತ್ಯವನ್ನೂ ವಿಮರ್ಶೆಯನ್ನೂ ಬಳಸಿಕೊಳ್ಳುವ ರಹಮತ್, ಸಾಹಿತ್ಯದ ಅನನ್ಯತೆಯನ್ನು ಅಲ್ಲಗಳೆಯುವುದಿಲ್ಲ. ಹಾಗೆಂದು ಪ್ರಾಯೋಗಿಕ ವಿಮರ್ಶೆಯ ಗೋಡೆಗಳ ನಡುವೆ ನಿರಾಳವಾಗಿ ಕೂಡುವುದೂ ಇಲ್ಲ. ಜೀವನ ಮತ್ತು ಸಾಹಿತ್ಯಗಳನ್ನು ಪರಸ್ಪರ ಒರೆಗಲ್ಲುಗಳಾಗಿ ಅವರು ಉಪಯೋಗಿಸುತ್ತಾರೆ.
ತಾರುಣ್ಯದ ತೀವ್ರತೆ ಮತ್ತು ಚಿತ್ರ ತುಂಬಿದ ಭಾಷೆಗಳ ಫಲವಾದ ಆಕರ್ಷಕ ಶೈಲಿ `ಪ್ರತಿಸಂಸ್ಕøತಿ'ಯ ಗುಣವಾಗಿದೆ.
-ಎಚ್.ಎಸ್. ರಾಘವೇಂದ್ರರಾವ್