ಲೇಖಕರು: ವಿಕ್ರಮ ವಿಸಾಜಿ ಪ್ರಕಾಶನ: ಅಭಿನವ, ಬೆಂಗಳುರು ಬೆಲೆ: 500/- ರಿಯಾಯಿತಿ: 10% .................. ವಿಕ್ರಮ ವಿಸಾಜಿ ಅವರ ಈ ಕೃತಿಯು ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳು, ಅಧ್ಯಾಪಕರು, ಸಂಶೋಧಕರು ಮತ್ತು ಕನ್ನಡದ ಬಗ್ಗೆ ಸಾಹಿತ್ಯದ ಬಗ್ಗೆ ಗಂಭೀರ ಕಾಳಜಿ ಇರುವ ಎಲ್ಲರೂ ಆಸಕ್ತಿಯಿಂದ ಮತ್ತು ಖುಷಿಯಿಂದ ಓದಬೇಕಾದ ಮಹತ್ವದ ಕೃತಿ. ‘ತಿರುಕ್ಕುರಳ್’ ನಿಂದ ‘ಟ್ರಾಫಿಕ್ ಸಿಗ್ನಲ್’ ಸಿನಿಮಾದ ವರೆಗೆ ಅನೇಕ ವಿಷಯಗಳ ಬಗ್ಗೆ ಲವಲವಿಕೆ ಹಾಗೂ ಖಚಿತವಾದ ತಿಳುವಳಿಕೆಯಿಂದ ಬರೆದ ಲೇಖನಗಳು ಇಲ್ಲಿವೆ. ಸೂಕ್ಷ್ಮವಾದ ಓದು, ಯಾವುದೇ ಪಠ್ಯದ ಸಮರ್ಪಕವಾದ ಓದಿಗೆ ಬೇಕಾದ ತೈಯಾರಿ ಮತ್ತು ಅಲ್ಲಲ್ಲಿ ಮಿಂಚುವ ಒಳನೋಟಗಳಿಂದಾಗಿ ಈ ಬರಹಗಳು ತುಂಬಾ ಉಪಯುಕ್ತವಾಗಿವೆ. ಪಾರಿಭಾಷಿಕಗಳ ಹಾಗೂ ಸಿದ್ಧಾಂತಗಳ ಹೊರೆಗಳಿಲ್ಲದೆ ಗಹನವಾದ ವಿಷಯಗಳನ್ನು ಚರ್ಚಿಸುವ ರೀತಿಯು ಮೆಚ್ಚಿಗೆ ಆಗುತ್ತದೆ. ಕೃತಿಯ ಜೀವಾಳವಿರುವುದು ಶೆಲ್ಡನ್ ಪೋಲಾಕ್, ಷ. ಶೆಟ್ಟರ್, ಮಹಾಶ್ವೇತಾದೇವಿ ಮುಂತಾದವರೊಂದಿಗೆ ವಿಸಾಜಿ ನಡೆಸಿರುವ ಸಂಭಾಷಣೆಗಳು. ಇವುಗಳು ಅನೇಕ ಒಳನೋಟಗಳಿಂದ ಕಿಕ್ಕಿರಿದಿವೆ. ಹಗುರ ಮಾತುಗಳು ಹಾಗೂ ಹರಟೆಗಳನ್ನು ಬದಿಗಿಟ್ಟು ಅಪೂರ್ವ ಪ್ರತಿಭಾವಂತರಿಂದ ಗಂಭೀರವಾದ ವಿಚಾರಗಳನ್ನು ಹೊಮ್ಮಿಸುವ ವಿಸ್ತಾರವಾದ ಓದು ಮತ್ತು ಚಿಂತನೆ ವಿಸಾಜಿಯವರಲ್ಲಿ ಇರುವುದರಿಂದ ಇದು ಸಾಧ್ಯವಾಗಿದೆ. ಗ್ರೀಕ್ ಕಾವ್ಯದ ಬಗ್ಗೆ, ಕೆ. ಬಿ. ಸಿದ್ಧಯ್ಯನವರ ಕಾವ್ಯದ ಬಗೆಗಿನ ಲೇಖನಗಳು ಮುಖ್ಯವಾಗಿವೆ. ಇಂದಿನ ತಲೆಮಾರು ನಿರೀಕ್ಷಿಸುವಂಥ ಓದುಗನಿಗೆ ತೆರೆದುಕೊಂಡ ಲವಲವಿಕೆಯ ಬರಹದ ಶೈಲಿಯನ್ನು ಅಷ್ಟೇನೂ ಆಕರ್ಷಕವಲ್ಲದ ವಿಮರ್ಶೆಯಂಥ ವಲಯಕ್ಕೂ ತಂದಿರುವ ವಿಸಾಜಿಯವರ ಪ್ರಯೋಗಶೀಲತೆ ಖುಷಿ ಕೊಡುತ್ತದೆ. ಕೃತಿಗಳ ಬಗೆಗಿನ ತಮ್ಮ ಖಚಿತ ಮೌಲ್ಯಮಾಪನವನ್ನು ಬಿಟ್ಟುಕೊಡದೆ ಇದನ್ನು ಅವರು ಸಾಧಿಸಿದ್ದಾರೆ ಎನ್ನುವುದು ಮುಖ್ಯ.
ರಾಜೇಂದ್ರ ಚೆನ್ನಿ