ಲೇಖಕರು: ಡಾ. ಟಿ.ಎಸ್. ರಮಾನಂದ್ ಬೆಲೆ: 150/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು .............................. ...ಈ ಕೃತಿಯು ಗೋವನ್ನು ಕುರಿತದ್ದು. ಜೀವವಿಕಾಸದ ಪಥದಲ್ಲಿ ಒಂದು ಸಾಧಾರಣ ಸಸ್ಯಾಹಾರಿಯಾಗಿ ಜನಿಸಿ, ಮನುಷ್ಯನ ಬೇಟೆಗೆ ಸುಲಭವಾಗಿ ಬಲಿಯಾಗಿ, ಆತನ ಹಸಿವನ್ನು ನೀಗಿಸಿದ ಈ ಪ್ರಾಣಿ ನಂತರದ ದಿನಗಳಲ್ಲಿ ಆತನ ಸಂಗಾತಿಯಾಗಿ ಬೆಳೆದುಬಂದದ್ದು ಮಾನವ ನಾಗರಿಕತೆಯ ಒಂದು ಕುತೂಹಲಕರ ಅಧ್ಯಾಯ. ಭಾರತೀಯರ ಬದುಕಿನಲ್ಲಿ ವಿಶಿಷ್ಠಸ್ಥಾನ ಗಳಿಸಿದ ಕಾರಣಗಳನ್ನು ಕುರಿತ ಸಂಶೋಧನೆ ಧಾರ್ಮಿಕ ಪ್ರಭಾವದಿಂದ ಹೊರಬಂದಿಲ್ಲವಾದ ಕಾರಣ, ಗೋಸಂರಕ್ಷಣೆ ಕುರಿತ ಅಭಿಪ್ರಾಯಗಳು ಹೆಚ್ಚಾಗಿ ಭಾವನಾತ್ಮಕವಾಗಿವೆ... -ಡಾ. ಟಿ.ಎಸ್. ರಮಾನಂದ (ಲೇಖಕರ ಮಾತಿನಿಂದ)
...ಪ್ರಸ್ತುತ ಕೃತಿಯು ಹಸುವಿನ ಬಗ್ಗೆ ದೊರೆಯಬಹುದಾದ ಎಲ್ಲ ಮಾಹಿತಿಗಳನ್ನೂ ಬಳಸಿಕೊಂಡು ಆಕರ್ಷಕವಾದ ಕಥನವನ್ನು ಕಟ್ಟಿದೆ. ದನಗಳ ಮೂಲಪುರುಷನೆನ್ನಬಹುದಾದ ಆರೋಕ್ಸಿಯ ಬಾಲಹಿಡಿದೇ ಕಥೆ ಪ್ರಾರಂಭವಾಗಿದೆ. ಬನಹಳ್ಳಿಯಲ್ಲಿ ಇರಬಹುದಾದ ಆರೋಕ್ಸ್ ತಳಿಯ ಅಸ್ತಿವೀಕ್ಷಣೆಗೆ ಹೊರಟ ಸ್ನೇಹಿತರ ಗುಂಪು ಹಸುವಿನೊಂದಿಗೆ ತಳುಕು ಹಾಕಿಕೊಳ್ಳುವ ಚರಿತ್ರೆ, ಭೂಗೋಳ, ಪುರಾಣ, ಧಾರ್ಮಿಕ ವಿಧಿನಿಷೇಧ, ದೇವಾಲಯ ಶಿಲ್ಪ ಎಲ್ಲವನ್ನೂ ಒಳಗೊಳ್ಳುತ್ತಾ ಮೂಳೆ ಹಂದರಕ್ಕೆ ರಕ್ತಮಾಂಸದ ಜೀವದ್ರವ್ಯ ಒದಗಿಸುತ್ತದೆ. ಪುರಾಣದಿಂದ ವರ್ತಮಾನದ ಗೋಹನನ ಮತ್ತು ರಕ್ಷಣೆಗಳ ರಾಜಕೀಯ ಹಿತಾಸಕ್ತಿಗಳವರೆಗೆ ಜೋಲಿ ಹೊಡೆಯುವ ಕಥನದ ವಿಸ್ತಾರ ಬೆರಗುಹುಟ್ಟಿಸುವಂತಿದೆ. ಈ ಗ್ರಂಥದ ರಚನೆಗಾಗಿ ರಮಾನಂದರು ನಡೆಸಿರಬಹುದಾದ ಪೂರ್ವ ಸಿದ್ಧತೆ ಗಮನಿಸಿದಾಗ ಅವರ ಬಗ್ಗೆ ಗೌರವಾಭಿಮಾನ ಉಂಟಾಗುತ್ತದೆ. ಈ ಕಥನದಲ್ಲಿ ಬರುವ ಅನೇಕ ವಿವರಗಳು ನಮ್ಮನ್ನು ಬೆಚ್ಚುಬೀಳಿಸಬಲ್ಲವು. ನಾವು ಅಮೃತ ಎನ್ನುವ ಹಸುವಿನ ಹಾಲು ಕೆಲವರಿಗೆ ವಿಷವಾಗಿಬಿಡುವ ಕಾರಣದ ಬಗ್ಗೆ ಸವಿವರವಾದ ಚರ್ಚೆಯಿದೆ. ನಾವು ಹಸುವನ್ನು ಅದರ ಹಾಲಿಗೆ ಮಾತ್ರವಲ್ಲ ಅದರ ಸೆಗಣಿಗೆ ಕೂಡ ಎಷ್ಟು ಅವಲಂಬಿಸುತ್ತೇವೆ ತಿಳಿದಾಗ ಅಚ್ಚರಿಯುಂಟಾಗುತ್ತದೆ. ಭಾರತದಲ್ಲಿ ಹಸುವಿನ ಬಗ್ಗೆ ಇರುವ ಪೂಜ್ಯಭಾವನೆ ಒಂದು ಕಡೆ, ಅದು ಇದ್ದೂ ಹೇಗೆ ವೇದಕಾಲದಿಂದ ಈವತ್ತಿನವರೆಗೆ ಅದರ ಹನನ ನಡೆಯುತ್ತಾ ಬಂದಿದೆ ಎಂಬ ಇನ್ನೊಂದು ವಿಪರ್ಯಾಸ- ಜೊತೆಗೆ ಹಸುವನ್ನು ಕೊಲ್ಲುವುದು, ಮಾಂಸಕ್ಕಾಗಿ ತಿನ್ನುವುದು ನಮ್ಮ ಜನ್ಮಸಿದ್ಧ ಹಕ್ಕು ಎನ್ನುವ- ಹಸುವಿನ ಬಗ್ಗೆ ಯಾವುದೇ ಧಾರ್ಮಿಕ ರಾಗದ್ವೇಶವಿಲ್ಲದೆ ಅದನ್ನು ಕೇವಲ ತಿನ್ನುವ ಮಾಂಸವಾಗಿ ಮಾತ್ರ ನೋಡುವ- ಭಿನ್ನ ಭಿನ್ನ ವೈಚಾರಿಕ ನಿಲುವುಗಳ ಸಂಘರ್ಷವನ್ನೇ ತಮ್ಮ ಓಟಿನ ರಾಜಕೀಯಕ್ಕೆ ಬಳಸಿಕೊಳ್ಳುವ ರಾಜಕೀಯ- ಎಲ್ಲದರ ಬಗ್ಗೆಯೂ ಕಣ್ತೆರೆಸುವ ಕೆಚ್ಚು ಈ ಬರವಣಿಗೆಗೆ ಇದೆ. -ಎಚ್.ಎಸ್. ವೆಂಕಟೇಶಮೂರ್ತಿ (ಮುನ್ನುಡಿಯಿಂದ)