ಲೇಖಕರು: ಡಾ. ರಶ್ಮಿ ಎಸ್. ಬೆಲೆ: 500/- ಪುಟಗಳು: 528 ರಿಯಾಯಿತಿ:10% ಪ್ರಕಾಶನ: ಅಭಿನವ, ಬೆಂಗಳೂರು .............................. ದೇಶವು ಯಾವುದಾದರೂ ಕ್ಲಿಷ್ಟ ಸನ್ನಿವೇಶವನ್ನು ಎದುರಿಸುತ್ತಿದ್ದರೆ ಸಂವಿಧಾನದತ್ತವಾದ ಕೆಲವು ನಾಗರಿಕ ಮತ್ತು ರಾಜಕೀಯ ಹಕ್ಕುಗಳನ್ನು ಮೊಟಕುಗೊಳಿಸಲು ಕೇಂದ್ರ ಸರ್ಕಾರವು ಕ್ರಮ ಕೈಗೊಳ್ಳಬಹುದು. ತುರ್ತುಪರಿಸ್ಥಿತಿಯನ್ನು ಘೋಷಿಸಲು ಸಂವಿಧಾನದಲ್ಲಿ ಕ್ರಮಗಳನ್ನು ಉಲ್ಲೇಖಿಸಲಾಗಿದೆ. ಕಾನೂನಾತ್ಮಕವಾಗಿ ಯಾವ ಹಕ್ಕುಗಳನ್ನು ರದ್ದು ಮಾಡದೆ ಸಹ ಪ್ರಜೆಗಳ ಮೇಲೆ ಅನೇಕ ನಿರ್ಬಂಧಗಳನ್ನು ಹೇರುವ ಸಾಧ್ಯತೆಯುಂಟು. ಅದು ಅಘೋಷಿತ ತುರ್ತುಪರಿಸ್ಥಿತಿ ಎನಿಸಿಕೊಳ್ಳುತ್ತದೆ. ಎರಡೂ ಸಂದರ್ಭದಲ್ಲಿ ನಾಗರೀಕರು ಎಚ್ಚರದಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಯ್ದುಕೊಳ್ಳುವ ಕ್ರಿಯಾಶೀಲತೆಯನ್ನು ತೋರುವ ಅಗತ್ಯವಿರುತ್ತದೆ. ೧೯೭೫ರಲ್ಲಿ ನಾಗರಿಕರು ಮತ್ತು ರಾಜಕೀಯ ಪಕ್ಷಗಳು ಅದನ್ನು ನಿಭಾಯಿಸಿದ್ದುದು ಈಗ ಇತಿಹಾಸ. ಕರ್ನಾಟಕದಲ್ಲಿ ಕೆಲವು ರಾಜಕೀಯ ವ್ಯಕ್ತಿಗಳನ್ನು ಬಂಧಿಸಲಾಗಿತ್ತು ಮತ್ತು ಜಾರ್ಜ್ ಫರ್ನಾಂಡಿಸರಿಗೆ ಆಶ್ರಯ ನೀಡಿದ್ದರೆಂಬ ಆಪಾದನೆ ಹೊರಿಸಿ ಕೆಲವರನ್ನು ಹಿಂಸಿಸಲಾಗಿತ್ತು. ಉತ್ತರ ಭಾರತದಲ್ಲಿ ಕಂಡುಬAದ ಉಪಟಳವು ಕರ್ನಾಟಕದಲ್ಲಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಅನುಭವಕ್ಕೆ ಬರಲಿಲ್ಲ. ಬದಲಾಗಿ ಭೂ ಸುಧಾರಣೆಯಂತಹ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅವಕಾಶವನ್ನು ಕಲ್ಪಿಸಿಕೊಳ್ಳಲಾಯಿತು. ಪ್ರಸ್ತುತ ಸಂಶೋಧನಾ ಕೃತಿಯಲ್ಲಿ ಡಾ. ಎಸ್. ರಶ್ಮಿ ಅವರು ೧೯೭೦-೧೯೮೦ರ ದಶಕದಲ್ಲಿ ಉಂಟಾದ ಪ್ರಮುಖ ಆರ್ಥಿಕ ಮತ್ತು ಸಾಮಾಜಿಕ ಪಲ್ಲಟಗಳ ವಿಸ್ತೃತ ಅಧ್ಯಯನವನ್ನು ಆಧರಿಸಿದ ವಿಶ್ಲೇಷಣೆಗಳನ್ನು ವಿವಿಧ ಆಯಾಮಗಳಲ್ಲಿ ಸಾದರಪಡಿಸಿದ್ದಾರೆ. ಹತ್ತಾರು ಆಕರಗಳಿಂದ ವಿಫುಲ ಮಾಹಿತಿಗಳನ್ನು ಕಲೆ ಹಾಕಿ ಒಂದು ಸಮಗ್ರ ಹಿನ್ನೋಟವನ್ನು ನೀಡುವ ಮೌಲಿಕವು ಉಪಯುಕ್ತವೂ ಆದ ಸಂಶೋಧನಾ ಗ್ರಂಥವನ್ನು ಸಿದ್ಧಗೊಳಿಸುವ ಈ ಸಂಶೋಧಕಿ ಅಭಿನಂದನಾರ್ಹರು. ಸಾಹಿತ್ಯ ಕೃತಿಗಳು, ಸರ್ಕಾರಿ ವರದಿಗಳು, ಪತ್ರಿಕಾ ಮಾಧ್ಯಮದಲ್ಲಿ ವ್ಯಕ್ತವಾಗಿದ್ದ ವೈವಿಧ್ಯಮಯ ಚರ್ಚೆಗಳು ಹಾಗೂ ಅಭಿಪ್ರಾಯಗಳು, ಸಂದರ್ಶನಗಳು, ಪ್ರದರ್ಶನ ಕಲೆಗಳ ಮೂಲಕ ಪ್ರತಿಫಲವಾದ ಭಾವನೆಗಳು, ಹೀಗೆ ಹಲವು ಮೂಲಗಳಿಂದ ಡಾ. ರಶ್ಮಿ ಇಡೀ ಸಮಕಾಲೀನ ಇತಿಹಾಸವನ್ನು ಕಟ್ಟಿಕೊಟ್ಟಿದ್ದಾರೆ. ಅಪಾರ ಶ್ರಮ ಮತ್ತು ಪರಿಶ್ರಮ ಎರಡೂ ಸಮ ಪ್ರಮಾಣದಲ್ಲಿ ಬೆಸೆಯಲ್ಪಟ್ಟು ಒಂದು ವಿಶಿಷ್ಠ ದಾಖಲೆಯಾಗುವ ಲಕ್ಷಣಗಳುಳ್ಳ ಗ್ರಂಥವು ಕನ್ನಡದ ಓದುಗರಿಗೆ ಲಭ್ಯವಾಗಿದೆ. ಅಂತೆಯೇ, ಇತಿಹಾಸದಲ್ಲಿ ಶಿಸ್ತಿನ ಅಧ್ಯಯನಕ್ಕೆ ಒಂದು ಮಾದರಿಯೂ ಆಗಿದೆ. ಚರ್ಚೆಗಳಲ್ಲಿ ಸುಧಾರಣಾ ಪ್ರಕ್ರಿಯೆ, ಹಾವನೂರು ವರದಿಯ ಹಿಂದು-ಮುAದು ಮತ್ತು ತುರ್ತುಪರಿಸ್ಥಿತಿಗೆ ವಿಭಿನ್ನ ಪ್ರಕ್ರಿಯೆಗಳು ಗ್ರಂಥದ ಮೌಲ್ಯವನ್ನು ಇಮ್ಮಡಿಗೊಳಿಸಿವೆ. ಇಂದಿನ ಸನ್ನಿವೇಶವನ್ನು ಸಮರ್ಥವಾಗಿ ಅರಿಯಲು ಹಿಂದಿನ ಅನುಭವಗಳು ದಾರಿದೀಪವಾಗಬಲ್ಲವು ಎಂಬುವುದಕ್ಕೆ ಪ್ರಮಾಣವೊದಗಿಸುವ ಮೌಲಿಕ ಸಂಶೋಧನಾ ಗ್ರಂಥವಿದೆನ್ನಲು ಅಡ್ಡಿಯಿಲ್ಲ.
-ಡಾ. ಜಿ. ರಾಮಕೃಷ್ಣ (ಮೊದಲ ಓದು)