ಲೇಖಕರು: ರಾಜೇಂದ್ರ ಚೆನ್ನಿ ಬೆಲೆ: 100/- ರಿಯಾಯಿತಿ: 10 ಪ್ರಕಾಶನ: ಅಭಿನವ, ಬೆಂಗಳೂರು
ದೇಶೀವಾದವೆನ್ನುವುದು ವಿಮರ್ಶೆಯಲ್ಲಿ ಅಥವಾ ಸಾಹಿತ್ಯ ಸಿದ್ಧಾಂತದಲ್ಲಿ ಅಷ್ಟೇನೂ ಪರಿಚಿತವಾಗಿರದ ಪದವಾಗಿದೆ. ಕನ್ನಡ ಮತ್ತು ಇತರ ಭಾಷೆಯ ಸಾಹಿತ್ಯಗಳಲ್ಲಿ ಈ ಪದವನ್ನು ಹೋಲುವ ಅನೇಕ ಶಬ್ದಗಳ ಬಳಕೆಯಾಗಿದೆ. ಅಲ್ಲದೇ ಈ ಪುಸ್ತಿಕೆಯಲ್ಲಿ ಚರ್ಚಿಸಲಾಗುವ ದೇಶೀವಾದದ ವ್ಯಾಪ್ತಿಗೆ ಬರುವಂಥ ಅನೇಕ ಪರಿಕಲ್ಪನೆಗಳ ಫಲವತ್ತಾದ ಚರ್ಚೆಯೂ ಆಗಿದೆ. ಆದರೆ ಒಂದು ಸ್ವತಂತ್ರ ಸಿದ್ಧಾಂತವಾಗಿ ಅಥವಾ ಸಾಹಿತ್ಯಿಕ ಚಳುವಳಿಯಾಗಿ ದೇಶೀವಾದವು ಹೆಚ್ಚಿನ ಮನ್ನಣೆ ಪಡೆದಂತೆ ತೋರುವುದಿಲ್ಲ. ದೇಶೀವಾದವೆನ್ನುವ ಪಾರಿಭಾಷಿಕಕ್ಕೆ ಖಚಿತವಾದ ವ್ಯಾಖ್ಯೆ ದೊರೆತಂತೆ ಕಾಣದಿದ್ದರೂ ಮತ್ತು ಆ ಹೆಸರನ್ನು ಹೊಂದಿರುವ ಸಾಹಿತ್ಯಿಕ ಚಳುವಳಿಯೊಂದು ಯಾವುದೇ ಸಾಹಿತ್ಯದಲ್ಲಿ ಮಹತ್ವ ಪಡೆಯದೇ ಇದ್ದರೂ ಹಲವಾರು ಶ್ರೇಷ್ಠ ಕೃತಿಗಳ ಹುಟ್ಟಿಗೆ ಕಾರಣವಾಗಿರುವ ಮತ್ತು ಕಾಲಕಾಲಕ್ಕೆ ವಿಮರ್ಶೆಯ ಒಲವನ್ನು ಪ್ರಭಾವಿಸಿರುವ ಪ್ರವೃತ್ತಿಯೊಂದರ ದ್ಯೋತಕವಾಗಿರುವುದು ಅದು ಎನ್ನುವುದನ್ನು ಇಲ್ಲಿ ಚರ್ಚಿಸಲಾಗುತ್ತದೆ. ದೇಶೀವಾದ ಎನ್ನುವ ಪದವನ್ನು ಇಂಗ್ಲಿಷ್ ಪಾರಿಭಾಷಿಕವಾದ Nativismನ ತರ್ಜುಮೆಯಾಗಿ ಬಳಸಿಕೊಳ್ಳಲಾಗಿದೆಯೆಂದು ಇಲ್ಲಿಯೇ ಹೇಳುವುದು ಉಚಿತ. ಏಕೆಂದರೆ ಕನ್ನಡದಲ್ಲಿ ಅತ್ಯಂತ ಸೃಷ್ಟಿಶೀಲವಾದ ಚರ್ಚೆಗೆ ಇಂಬು ಮಾಡಿಕೊಟ್ಟಿರುವ ದೇಸಿ’ ಎನ್ನುವ ಪಾರಿಭಾಷಿಕದಿಂದ ಬೇರೆಯಾಗಿರುವ ಪಾರಿಭಾಷಿಕವಿದು ಎನ್ನುವುದನ್ನು ಗಮನಿಸಬೇಕು.
ದೇಸಿ’ ಮತ್ತು ದೇಶೀ’ ಇವೆರಡೂ
ದೇಶ್ಯ’ ಎನ್ನುವ ಪದದಿಂದಲೇ ಹುಟ್ಟಿವೆ. ಆದರೆ `ದೇಸಿ’ ಎನ್ನುವುದು ಮೂಲತಃ ಅಭಿವ್ಯಕ್ತಿಗೆ, ಭಾಷೆಯ ಬಳಕೆಗೆ ಸಂಬಂಧಪಟ್ಟ ದೇಶೀವಾದ ಪದವಾಗಿದೆ.
-ರಾಜೇಂದ್ರ ಚೆನ್ನಿ (ಒಳಪುಟಗಳಿಂದ)