ಸಂಪಾದಕರು: ನರಹಳ್ಳಿ ಬಾಲಸುಬ್ರಹ್ಮಣ್ಯ
ಬೆಲೆ: 200/- ಪುಟಗಳು: 212
ರಿಯಾಯಿತಿ: 10%
ಪ್ರಕಾಶನ: ಅಭಿನವ, ಬೆಂಗಳೂರು
...............................
ಎರಡು ಕಾರಣಗಳಿಗಾಗಿ ಈ ಸಂಪುಟ ಮುಖ್ಯ. ಮೊದಲನೆಯದು ಇಲ್ಲಿನ ಬಹುಪಾಲು ಲೇಖಕರು ಯೂನಿವರ್ಸಿಟಿಗಳಿಂದ ದೂರ ಇರುವವರು ಮತ್ತು ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿಸಿಕೊಂಡವರು. ಹಿಂದೆ ಈ ರೀತಿಯ ವಿಚಾರ ಸಂಕಿರಣಗಳು, ಪುಸ್ತಕಗಳು ಬಂದಿಲ್ಲವೆಂದಲ್ಲ. ಸಾಹಿತ್ಯ ಸೃಷ್ಟಿ ಮತ್ತು ವೈಜ್ಞಾನಿಕ ಮನೋಧರ್ಮ',
ಅನ್ಯಶಿಸ್ತುಗಳ ಮೂಲಕ ಕನ್ನಡ ಸಾಹಿತ್ಯ' ಮುಂತಾದವುಗಳಲ್ಲಿನ ಬರಹಗಳೆಲ್ಲ ಸಾಹಿತಿಗಳದ್ದೇ. ವಿಜ್ಞಾನದ ಬಗೆಗೆ ಸಾಹಿತಿಗಳು ಬರೆಯಬಾರದೆಂದಲ್ಲ. ಆಯಾ ವಿಷಯ ತಜ್ಞರು ಬರೆಯುವುದಕ್ಕೂ ಸಾಹಿತಿಗಳು ಬರೆಯುವುದಕ್ಕೂ ವ್ಯತ್ಯಾಸವಿದೆ. ಉದಾ: ತತ್ವಶಾಸ್ತ್ರದ ವಿಷಯದಲ್ಲಿ ಆ ವಿಷಯ ಪರಿಣತರು ಮಾತನಾಡುವ ವಿಚಾರಗಳಿಗೂ, ಸಾಹಿತಿಗಳು ಮಾತನಾಡುವುದಕ್ಕೂ ಭಿನ್ನತೆ ಇದೆ.
ಎರಡನೆಯದು ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಾಹಿತ್ಯ ಬೆಳೆಸಲು ಪ್ರಯತ್ನಿಸಿದ ಒಂದು ಪ್ರಂಪರೆಯೇ ಇದೆ. ಪ್ರಬುದ್ಧ ಕರ್ನಾಟಕದಂಥ ಪತ್ರಿಕೆ ಐವತ್ತು ವರ್ಷಗಳ ಹಿಂದೆ ಸುಮಾರು 600 ಪುಟಗಳ ವಿಶೇಷ ಸಂಚಿಕೆ ತಂದಿದೆ. ಅದು ವಿಜ್ಞಾನದ ಬಹುಪಾಲು ಎಲ್ಲ ವಿಷಯಗಳ ಬಗೆಗೆ ಪರಿಚಯಾತ್ಮಕ ಲೇಖನಗಳನ್ನು ಒಳಗೊಂಡಿದೆ.
ಈ ಸಂಪುಟದ ಲೇಖಕರು ವಿಜ್ಞಾನ ಮತ್ತು ಇತರ ಜ್ಞಾನಶಾಖೆಗಳಲ್ಲಿ ಹೇಗೋ ಹಾಗೆಯೇ ಸಾಹಿತ್ಯದಲ್ಲಿಯೂ ಸಮಾನ ಆಸಕ್ತಿಯನ್ನಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಹೀಗೆ ಭಿನ್ನ ಆಸಕ್ತ ವಲಯದಿಂದ ಬಂದಿರುವ ಬರಹಗಳು ಇಲ್ಲಿವೆ. ಇವು ಸಾಹಿತ್ಯ, ಸಂಸ್ಕೃತಿ, ಸಂವೇದನೆಗಳನ್ನು ಭಿನ್ನ ನೆಲೆಗಳಲ್ಲಿ ಗ್ರಹಿಸುವಂಥವು. ಕನ್ನಡದ ಸಂವೇದನೆಯ ನೆಲೆಗಳನ್ನು ವಿಸ್ತರಿಸುವ ಇಂಥ ಪ್ರಯತ್ನಗಳಿಗೆ ಇದು ಮಾದರಿಯಾಗಲಿ ಎಂಬ ಆಶಯ ನಮ್ಮದು.
ನ. ರವಿಕುಮಾರ (ಪ್ರಕಾಶಕರ ಮಾತಿನಿಂದ)