ಷ. ಶೆಟ್ಟರ್ ಕನ್ನಡಕ್ಕೆ: ಶಾಂತಿನಾಥ ದಿಬ್ಬದ ಬೆಲೆ: 350/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು ..................... ಹೆಸರಾಂತ ಇತಿಹಾಸಕಾರ ಪ್ರೊ. ಷಡಕ್ಷರ ಶೆಟ್ಟರ್ ಈಗಿಲ್ಲ. ಅವರು ಶಿಲ್ಪ, ವಿನ್ಯಾಸ, ಶಾಸನ, ವೀರಗಲ್ಲುಗಳ ಬಗ್ಗೆ ವಿದ್ವತ್ಪೂರ್ಣ ಲೇಖನಗಳನ್ನು ಬರೆದರು. ಅವರಂತೆ ಸುಂದರ ಶಿಲ್ಪಗಳ ನಿರ್ಮಾಪಕರಾದ ಕಲಾಕಾರರು, ಶ್ರಮಜೀವಿ ಶಿಲ್ಪಿಗಳ ಬಗ್ಗೆ ವಿಸ್ತೃತ ಮತ್ತು ಆಳವಾದ ಸಂಶೋಧನೆ ಮಾಡಿದ ಇತಿಹಾಸಜ್ಞರು ಇನ್ನೊಬ್ಬರು ದೊರಕುವುದಿಲ್ಲ. ಇಂಥ ಶಿಲ್ಪಿಗಳು ಮತ್ತು ಶಾಸನ ಲೆಕ್ಕಣಿಕರ ಮೇಲೆ ಇಂಗ್ಲಿಷಿನಲ್ಲಿ ಪ್ರೊ. ಶೆಟ್ಟರ್ ಬರೆದ ಪ್ರಬಂಧಗಳನ್ನು ಕನ್ನಡಿಸಿ ಪ್ರೊ. ಶಾಂತಿನಾಥ ದಿಬ್ಬದ ಕನ್ನಡ ಓದುಗರಿಗೆ ಉಪಕಾರ ಮಾಡಿದ್ದಾರೆ. ಪ್ರಸ್ತುತ `ಸ್ಥಪತಿ’ ಹೊತ್ತಿಗೆಯಲ್ಲಿ ಮೂರು ಭಾಗಗಳಿವೆ ಮೊದಲನೆಯ ವಿಭಾಗದಲ್ಲಿ ಭಾರತದ ಮುಖ್ಯ ಶಿಲ್ಪಿಗಳನ್ನು ಕುರಿತ ಲೇಖನಗಳಿವೆ, ಎರಡನೆಯ ಭಾಗದಲ್ಲಿ ಸುಮಾರು 7-8ನೆಯ ಶತಮಾನದಿಂದ 17-18ನೆಯ ಶತಮಾನದವರೆಗಿನ ಹದಿನಾಲ್ಕು ಸಾವಿರಕ್ಕೂ ಹೆಚ್ಚು ಮಾಸ್ತಿ, ವೀರಗಲ್ಲು ಮತ್ತು ನಿಷಿಧಿಗಳಲ್ಲಿರುವ ಶಾಸನಗಳನ್ನು ಅಭ್ಯಾಸಿಸಿ ಲೆಕ್ಕಣಿಕಾರರ ಬಗ್ಗೆ ಬರೆದ ಪ್ರಬಂಧಗಳಿವೆ. ಮೂರನೆಯ ಭಾಗದಲ್ಲಿ ಹೊಯ್ಸಳ-ವಿಜಯನಗರ ಕಾಲದ ರಾಜಕೀಯ ಚರಿತ್ರೆ, ಶಿಲ್ಪಿಗಳ ಕಾರ್ಯವಿಧಾನ, ಶೈವ, ಜೈನ, ವೈಷ್ಣವ ದೇವಾಲಯ ಮುಂತಾದವನ್ನು ವಿವೇಚಿಸಿ ಅವುಗಳನ್ನು ರಚಿಸಿದ ಸ್ಥಪತಿಗಳ ಬಗ್ಗೆ ಬರೆದ ದೀರ್ಘ ಪ್ರಬಂಧಗಳಿವೆ. ಸಾಮಾನ್ಯವಾಗಿ ವೀರಗಲ್ಲು ಇತ್ಯಾದಿಗಳನ್ನು ಹಳ್ಳಿ ಹಳ್ಳಿಗಳಲ್ಲಿ ನೋಡಿದಾಗ ನಾವು ಇಂಥ ವೀರ ಯಾರ ಪರವಾಗಿ ಹೋರಾಡುತ್ತ ಯಾವ ಯುದ್ಧದಲ್ಲಿ ಮಡಿದ? ಆ ಯುದ್ಧದ ಕಾಲ ಮತ್ತು ಉದ್ದೇಶವೇನಾಗಿತ್ತು? ಎಂಬುದನ್ನು ವಿಚಾರಿಸುತ್ತೇವೆ ಆದರೆ ಪ್ರೊ. ಶೆಟ್ಟರ್ ನಮ್ಮ ಗಮನವನ್ನು ಮೊದಲ ಬಾರಿಗೆ ಈ ಶಾಸನವನ್ನು ಕಲ್ಲಿನಲ್ಲಿ ಕಟೆದವರಾರು? ಎಲ್ಲಿಯವರು? ಇತ್ಯಾದಿ ಮಾಹಿತಿ ಸಂಶೋಧಿಸಿ ಕೊಡುತ್ತಾರೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ಹೊಯ್ಸಳ-ವಿಜಯನಗರದ ದೇವಾಲಯಗಳ ಶಿಲ್ಪಿಗಳ ಬಗ್ಗೆ ಕೊಡುತ್ತಾರೆ. ಆ ಕಾಲದಲ್ಲಿ ನೂರಾರು ಶೈವ, ಜೈನ, ವೈಶ್ಣವ ದೇವಾಲಯಗಳ ರಚನೆ, ಜೀರ್ಣೋದ್ಧಾರ ನಡೆಯಿತು. ಅಂಥ ಬೆರಗಾಗುವ ಕೆಲಸ ಮಾಡಿದ ಶಿಲ್ಪಿಗಳ ಹೆಸರು, ಊರು, ವ್ಯವಸಾಯ ಅಥವಾ ಸಮುದಾಯ, ಪಡೆದ ಸಂಭಾವನೆ, ರಚಿಸಿದ ಇತರ ಗಣ್ಯ ಶಿಲ್ಪಗಳು ಇತ್ಯಾದಿ ವಿವರಗಳನ್ನು ಅಚ್ಚರಿ ಬರುವಂತೆ ಮಂಡಿಸಿ ತೆರೆಮರೆಯ ಅಗಾಧ ಪ್ರತಿಭೆಯ ವಿಶ್ವಕರ್ಮರ ಪರಿಚಯ ಮಾಡಿಕೊಡುತ್ತಾರೆ. ಒಟ್ಟಾರೆ ಗಹನವಾದ, ಅತಿಪರಿಶ್ರಮದ ಸಂಶೋಧನೆಯ ಫಲ ನಮಗೆಲ್ಲರಿಗೂ ಎಟಕುವಂತೆ ಮಾಡುತ್ತಾರೆ. ಕೊನೆಯ ಭಾಗದಲ್ಲಿ ಕದಂಬರಿಂದ ಕುಷಾಣರವರೆವಿಗೆ ಭಾರತದಲ್ಲಿದ್ದ ಶಿಲ್ಪಿಗಳ ಬಗೆಗೆ ಸಂಕ್ಷಿಪ್ತವಾಗಿ ವಿಶ್ಲೇಷಿಸಿದ್ದಾರೆ. ಇತಿಹಾಸಕಾರನಲ್ಲದ ಭೌತ ವಿಜ್ಞಾನಿಯಾದ ನನ್ನಂಥವನೂ ಓದಿ ಸಂತೋಷಪಟ್ಟ ಗ್ರಂಥವಿದು. -ಶಿವಾನಂದ ಕಣವಿ ಅತಿಥಿ ಪ್ರಾಧ್ಯಾಪಕ, ನಿಯಾಸ್, ಬೆಂಗಳೂರು