ಲೇಖಕರು: ಬಸವರಾಜ ಕಲ್ಗುಡಿ ಬೆಲೆ: 500/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು
ಕರ್ನಾಟಕ ಸತಿಸಹಗಮನ ಪದ್ಧತಿಯ ಚಾರಿತ್ರಿಕ ವಿವರಗಳು ಹಾಗೂ ವಿಶ್ಲೇಷಣೆಯನ್ನು ಒಳಗೊಂಡ ಈ ಕೃತಿಯನ್ನು 1985ರಲ್ಲಿ ಕನ್ನಡ ಅಧ್ಯಯನ ಕೇಂದ್ರದ ಸಂಶೋಧನ ಮಾಲಿಕೆಯಲ್ಲಿ 49ನೆಯ ಪುಸ್ತಕವಾಗಿ ಪ್ರಕಟಿಸಲಾಗಿತ್ತು. ಕರ್ನಾಟಕದ ಎಲ್ಲ ಭಾಗಗಳ ಹಳ್ಳಿ ಹಳ್ಳಿಗಳಲ್ಲಿ ಓಡಾಡಿ ಸಂಗ್ರಹಿಸಿದ ಮಹಾಸತಿ ಆಚರಣೆಗೆ ಸಂಬಂಧಿಸಿದ ವಿವರಣೆ ಹಾಗೂ ವಿಶ್ಲೇಷಣೆಗಳು ಸಮಗ್ರವಾಗಿ ಒಂದೆಡೆಗೆ ದೊರೆಯುವಂತಾಗಿದ್ದು ಮೊಟ್ಟ ಮೊದಲ ಬಾರಿಗೆ ಈ ಸಂಶೋಧನೆಯಿಂದಲೇ. ಸತಿಯ ಆಚರಣೆಗೆ ಸಂಬಂಧಿಸಿದಂತೆ ಪೂರಕ ಸಾಮಗ್ರಿಯಾಗಿ ಶಾಸನಗಳಿಂದ ದತ್ತವಾದ ದಾಖಲೆಗಳು ಹಾಗೂ ಹದಿನೈದನೆಯ ಶತಮಾನದಿಂದ ಹತ್ತೊಂಬತ್ತನೆಯ ಶತಮಾನ- ದವರೆಗಿನ ವಿದೇಶೀ ಪ್ರವಾಸಿಗರ ಸತಿಯ ಘಟನೆಗಳ ಉಲ್ಲೇಖಗಳು ಮತ್ತು ಮಹಾಸತಿ ಜನಪದ ಗೀತೆಗಳೂ ಸೇರಿ-ಒಂದು ಪೂರ್ಣವಾದ ಮಾಹಿತಿ ಸಮಗ್ರವಾಗಿ ಇಲ್ಲಿ ದೊರೆಯುತ್ತಿದೆ. ವ್ಯಾಪಕವಾದ ಫೋಟೋ ಸಾಮಗ್ರಿಯೂ ಇಲ್ಲಿಯ ವಿವರಗಳಿಗೆ ಪೂರಕವಾಗಿ ಬಂದಿವೆ. ಮಧ್ಯಕಾಲೀನೋತ್ತರ ಕರ್ನಾಟಕ ರಾಜಕೀಯವಾಗಿ ಪಾಳೆಯಪಟ್ಟುಗಳಾಗಿ ಒಡೆದು ಹೋದ ಮೇಲೆ ಸಣ್ಣ ಸಣ್ಣ ಸೈನ್ಯ ಕಟ್ಟಲು ಜನರನ್ನು ಬಳಸಿಕೊಳ್ಳಲಾಯಿತು. ಊರ ಅಳಿವು, ಗೋಸಂಪತ್ತಿನ ಕೊಳ್ಳೆಗಳು ಹೆಚ್ಚು ಹೆಚ್ಚಾದವು. ಸಾಮಾನ್ಯ ಸೈನಿಕರ, ಊರ ಕಾಯುವವರ ಸಾವಿನ ಸಂಖ್ಯೆ ಮಿತಿಮೀರಿ- ಸಹಗಮನದಂಥ ಕ್ರೂರ ಆಚರಣೆಗೆ ಭಾರತದಲ್ಲಿ ಮತ್ತೆಲ್ಲೂ ಈ ಕಾಲದಲ್ಲಿ ಇಲ್ಲದಷ್ಟು ಕುಮ್ಮಕ್ಕು ಸಿಕ್ಕಿದ್ದು ಸಾಮಾನ್ಯ ಕನ್ನಡ ಭಾಷಿಕ ಸಮುದಾಯಗಳ ಒಂದು ವಿಷಾದ ಚರಿತ್ರೆಯೇ ಸರಿ. ಸಹಗಮನ ಈ ಕಾಲದಲ್ಲಿ ಎಷ್ಟರಮಟ್ಟಿಗೆ ಒಂದು ವಿಧಿಯುಕ್ತ ಆಚರಣೆಯಾಗಿತ್ತೆಂದರೆ, ಏನಕೇನ ಗಂಡ ಸತ್ತರೂ, ಹೆಂಡತಿಯಾದವಳು ಜೊತೆಗೂಡಿ ಸಾಯಬೇಕಾದಂಥ ವಾತಾವರಣ ನಿರ್ಮಾಣವಾಗಿತ್ತು. ಹೋರಾಟದ ಸಾಮಾನ್ಯ ಕುಲಕ್ಕೇ ಸೇರಿದ ಸಮುದಾಯಗಳು ಈ ದಾರುಣ ಘಟನೆಗೆ ಬಲಿಯಾದದ್ದು ಚರಿತ್ರೆಯ ಕರಾಳ ಅಧ್ಯಾಯಗಳಲ್ಲಿ ಒಂದಾಗಿದೆ. ಪುರೋಹಿತಶಾಹಿ ಮತ್ತು ಪಿತೃಪ್ರಧಾನ ವ್ಯವಸ್ಥೆಯು ತರ್ಕಬದ್ಧವಾಗಿ ನಡೆಸಿದ ಹೆಣ್ಣಿನ ಮೇಲಿನ ಈ ಶೋಷಣೆಯ ಸ್ವರೂಪವನ್ನು ವಿವರಗಳೊಡನೆ ತಿಳಿಯುವುದೂ, ನಮ್ಮ ಗತದ ಕರಾಳ ಸೂಕ್ಷ್ಮವನ್ನು ಅರಿಯುವಲ್ಲಿ ನೆರವಾಗುತ್ತದೆ. ಗತವೈಭವವನ್ನು ವೈಭವಿಸಿ ಹೇಳುವ ಚರಿತ್ರೆಯ ಮಾದರಿ ಎಷ್ಟು ಸುಳ್ಳು ಎನ್ನುವುದನ್ನು ಈ ವಿವರಗಳು ಹಿಡಿಯುತ್ತವೆ.
-ಬಸವರಾಜ ಕಲ್ಗುಡಿ (ಲೇಖಕರ ಮಾತಿನಿಂದ)