ಸಂಪಾದಕರು: ಜಿ.ಎಚ್. ನಾಯಕ ಬೆಲೆ: 500 ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು
ಹೊಸಗನ್ನಡ ಕವಿತೆ ಎಂಬ ಹೆಸರಿನ ಈ ಸಂಕಲನ ಗ್ರಂಥ ಬಹುಮಟ್ಟಿಗೆ ಈ ಶತಮಾನದ ಕನ್ನಡ ಕಾವ್ಯ ನಡದುಬಂದ ದಾರಿಯ ಒಂದು ವಿಹಂಗಮ ನೋಟ. ಇದನ್ನು ಅವಲೋಕಿಸುವವರಿಗೆ ಹೊಸಗನ್ನಡ ಕಾವ್ಯದ ವಿವಿಧ ಮಜಲುಗಳ ಪರಿಚಯ ಆಗುವುದರ ಜೊತೆಗೆ ಅದರ ಬಿಗಿಬನಿ, ಭಾವ ಭಾಷೆಗಳ ಸಂಪತ್ತು, ವಿಲಾಸ ಇವುಗಳ ದರ್ಶನವಾಗುತ್ತದೆ. ವಸ್ತುವಿನ ಆಯ್ಕೆಯಲ್ಲಿ, ಲಯದಲ್ಲಿ, ಭಾಷೆಯಲ್ಲಿ ಮೈದೋರುವ ಇಲ್ಲಿನ ವೈವಿಧ್ಯ ವಿಸ್ತಾರ ಬೆರಗುಗೊಳಿಸುವಂಥದು. ನಮ್ಮ ಕಾಲದ ಕನ್ನಡ ಕಾವ್ಯದ ಇತಿಹಾಸ ಬರೆಯುವವರಿಗೆ ಇದು ಸಹಾಯಕ ಗ್ರಂಥವಾಗುತ್ತದೆ ಎಂಬುದು ನನ್ನ ಎಣಿಕೆ. ಇಂತಹದೊಂದು ಸಂಕಲನ ಅಗತ್ಯ ಎಂಬುದನ್ನು ಮನಗಂಡು ಈ ಕಾರ್ಯವನ್ನು ನಿರ್ವಹಿಸಲು ಸಮರ್ಥರಾದ ಜಿ. ಎಚ್. ನಾಯಕರಿಗೆ ವಹಿಸಲಾಯಿತು. ಅವರು ಸಾಹಿತ್ಯದ ಗಂಭೀರ ಹಾಗು ಪ್ರತಿಭಾನ್ವಿತ ವಿದ್ಯಾರ್ಥಿ. ಸೂಕ್ಷ್ಮ ಸಂವೇದನಾ ಶಕ್ತಿಯುಳ್ಳವರು. ಕಾವ್ಯದ ಸತ್ವವನ್ನು ಹಿಡಿಯಬಲ್ಲ ಪ್ರಾಜ್ಞರು. ಈ ಸಂಪಾದನಾ ಕಾರ್ಯದಲ್ಲಿ ಬಹುವಾಗಿ ಶ್ರಮಿಸಿದ್ದಾರೆ, ಅಭ್ಯಸಿಸಿದ್ದಾರೆ. ಪೂರ್ವಗ್ರಹಿಕೆಗಳಿಂದ ಪಾರಾಗುವುದು ಕಡುಕಷ್ಟ. ಜಿ. ಎಚ್. ನಾಯಕರು ಈ ದೋಷದಿಂದ ಮುಕ್ತರಾಗಿ ನಮ್ಮ ಸಮಕಾಲೀನ ಕಾವ್ಯದ ಸುವರ್ಣರೇಖೆಯನ್ನು ಇಲ್ಲಿ ದಾಖಲಿಸಿದ್ದಾರೆ. ಇದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ಕೃತಜ್ಞವಾಗಿರುತ್ತದೆ.
-ಹಂಪ ನಾಗರಾಜಯ್ಯ (24.4.1984)