ಲೇಖಕರು: ಕೆ. ಸತ್ಯನಾರಾಯಣ ಬೆಲೆ: 350/- ಪುಟಗಳು: 264 ISBN: 978-81-944761-8-4 ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು. .................. ಶತಮಾನದುದ್ದಕ್ಕೂ ಬಾಡಿಗೆ ಮನೆಗಳಿಂದ ಪಡೆದ ಅಪೂರ್ವ ಅನುಭವಗಳನ್ನು ಒತ್ತಾಸೆಯಾಗಿ ಇಟ್ಟುಕೊಂಡ ಈ “ರಾಜಚರಿತ್ರೆ”ಯಲ್ಲಿ ಕೆ. ಸತ್ಯನಾರಾಯಣ, ವೈಯಕ್ತಿಕ, ಕೌಟುಂಬಿಕ, ಸಾಂಸ್ಕೃತಿಕ ಬದುಕಿನ ಮತ್ತು ಅಂತಃಕರಣದ ಶ್ರೀಮಂತ ಪದರುಗಳನ್ನು ಪ್ರೀತಿಯಿಂದ, ಉಲ್ಲಾಸದಿಂದ ಮಂಡಿಸುತ್ತಾ, ಶೋಧಿಸುತ್ತಾ ಹೋಗುತ್ತಾರೆ. ಬಹುಪಾಲು ಆತ್ಮಚರಿತ್ರೆಗಳಲ್ಲಿ ಕಂಡುಬರುವ ಹಳಹಳಿಕೆ, ಆತ್ಮರತಿ, ನಾನೇ ಸರಿತನದ ಧೋರಣೆ, ನನ್ನ ಬದುಕೇ ಅತ್ಯಮೂಲ್ಯ ಎಂಬ ನಿಲುವುಗಳಿಂದ ಇವರ ಬರವಣಿಗೆ ತಪ್ಪಿಸಿಕೊಂಡಿದೆ. ಭಾವ ತೀವ್ರವಾಗಿದ್ದೂ ವಸ್ತುನಿಷ್ಠವಾಗಿರುವುದು. ಒಂದು ಕಾಲಮಾನದ ಕತೆಯನ್ನು ಹೇಳುತ್ತಿರುವಾಗಲೇ ವಿಶಾಲವಾದ ಚಾರಿತ್ರಿಕ ಪ್ರಜ್ಞೆಯನ್ನು ಉಳಿಸಿಕೊಂಡಿರುವುದು ಈ ಬರವಣಿಗೆಯ ಇನ್ನೊಂದು ವೈಶಿಷ್ಟ್ಯ. “ಬಾಡಿಗೆ ಮನೆ”, ಭಾರತೀಯರ ಬದುಕಿನ ಹೆಣಗಾಟ, ಸಾಧನೆ, ಕನಸುಗಾರಿಕೆಗಳ ಪ್ರತೀಕವಾಗಿದೆ. ಈ ರಾಜಚರಿತ್ರೆಯನ್ನು ಓದುತ್ತಿರುವಾಗಲೇ ಓದುಗರು ಅವರ ಮನಸ್ಸಿನಲ್ಲಿ ತಮ್ಮದೇ ಆದ ಚರಿತ್ರೆಯನ್ನು ರೂಪಿಸಿಕೊಳ್ಳುತ್ತಾ ಹೋಗುತ್ತಾರೆ. ಹಾಗಾಗಿ ಈ ಕೃತಿ ಒಂದು ಸಾಮುದಾಯಿಕ ಕಥನವನ್ನು ಕೂಡ ಹುಟ್ಟುಹಾಕವಷ್ಟು ಶಕ್ತವಾಗಿದೆ. ಈ ಸಂಪುಟವೂ ಸೇರಿದಂತೆ ತಮ್ಮ ನಾಲ್ಕು ಸಂಪುಟಗಳಲ್ಲಿನ ಆತ್ಮಚರಿತ್ರೆಯ ಮೂಲಕ (ನಾವೇನು ಬಡವರಲ್ಲ, ಸಣ್ಣಪುಟ್ಟ ಆಸೆಗಳ ಆತ್ಮಚರಿತ್ರೆ, ವೃತ್ತಿ ವಿಲಾಸ) ಆತ್ಮಚರಿತ್ರೆಯನ್ನು ಬರೆಯುವ ಇನ್ನೊಂದು ಮಾದರಿಯನ್ನು ಹಾಗೂ ಸಮಕಾಲೀನ ಚರಿತ್ರೆಯನ್ನು ಕಟ್ಟಿಕೊಡುವ ಭಿನ್ನ ರೀತಿಯನ್ನು ಸತ್ಯನಾರಾಯಣ ತೋರಿಸಿಕೊಟ್ಟಿದ್ದಾರೆ. (ಬೆನ್ನುಡಿಯಿಂದ)