ಸಂಪಾದಕರು: ಪಿ. ಚಂದ್ರಿಕಾ
ಬೆಲೆ: 75/-, ಪುಟಗಳು: 104
ರಿಯಾಯಿತಿ: 10%
ಪ್ರಕಾಶನ: ಅಭಿನವ, ಬೆಂಗಳೂರು
..................
ತುಂಬಾ ತಡವಾಗಿ ಸಾಹಿತ್ಯ ಕೃಷಿಯನ್ನು ಆರಂಭಿಸಿದ ರಜನಿಯವರು ತಮ್ಮ ಮೊದಲ ಕಾದಂಬರಿಯಲ್ಲಿಯೇ ಸಾಹಿತ್ಯಾಸಕ್ತರ ಗಮನ ಸೆಳೆದರು. ತಮ್ಮ ಅನುಭವ ದ್ರವ್ಯವನ್ನೇ ನೆಚ್ಚಿ ಬರೆಯುವ ರಜನಿಯವರ ಸಾಹಿತ್ಯದಲ್ಲಿ ಕೊಡಗಿನ ಮಣ್ಣಿನ ರಮ್ಯತೆ ಮತ್ತು ಲಯಗಳನ್ನು ಕಾಣಬಹುದು. ದಟ್ಟ ಪ್ರಾಕೃತಿಕ ಪರಿಸರದ ಹಿನ್ನೆಲೆಯಿಂದ ಬಂದಕಾರಣಕ್ಕೇ ಇರಬೇಕು ವಿಸ್ತಾರವಾದ ಮತ್ತು ಘನವಾದ ಸಾಹಿತ್ಯಕ ರೂಪಣೆ ಇವರ ಬರಹದಲ್ಲಿ ಎದ್ದು ಕಾಣುವ ಅಂಶವಾಗಿದೆ.
ರಜನಿ ಅವರ ಸಾಹಿತ್ಯಕ ಸಾಧನೆಯನ್ನು ಕನ್ನಡ ವಿದ್ವತ್ವಲಯ ಗಮನಿಸಿದೆ ಮತ್ತು ಗುರುತಿಸಿದೆ. ಆ ಬಗೆಗೆ ಹೆಚ್ಚು ವಿಸ್ತಾರವಾಗಿ ನೋಡದೆ ಈ ಸಂಪುಟದ ಬಗೆಗೆ ಕೆಲವು ಸಂಗತಿಗಳನ್ನು ಹೇಳಿ ನನ್ನ ಬರಹವನ್ನು ಮುಗಿಸುವೆ. ಮೊದಲನೆಯದಾಗಿ ಇಲ್ಲಿ ರಜನಿ ನರಹಳ್ಳಿ ಅವರು ಕೇಂದ್ರವಾಗಿದ್ದರೂ ಹಲವು ಸಂಗತಿಗಳು ಕೆಂದ್ರದಿಂದ ಅಂಚಿಗೂ ಅಂಚಿನಿಂದ ಕೇಂದ್ರಕ್ಕೂ ಜೊಕಾಲಿಯಂತೆ ಜೀಕುತ್ತವೆ. ಉದಾಹರಣೆಗೆ ಅಮ್ಮನ ಬಗೆಗೆ ಬರೆಯುತ್ತಾ ಮಕ್ಕಳು ತಮ್ಮ ಬದುಕನ್ನು ನೋಡಿಕೊಳ್ಳುವ ಚಿತ್ರ ಇಲ್ಲಿದೆ. ಅಂದರೆ ಒಂದು ವ್ಯಕ್ತಿತ್ವವನ್ನು, ಅದು ರೂಪುಗೊಳಿಸಿದ ಸಂಗತಿಗಳನ್ನು ಹಲವು ದೃಷ್ಟಿಕೋನಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ. ಹೀಗಾಗಿ ಇದು ಏಕಕಾಲಕ್ಕೆ ರಜನಿ ಅವರ ಅಂತಃಕರಣವನ್ನು ಕುರಿತ ಬರಹಗಳು ಹೌದು ಅವರ ಕುಟುಂಬದ ಕಥೆಯೂ ಹೌದು. ರಜನಿ ಅವರು ತಮ್ಮನ್ನು ಸಾಹಿತ್ಯದ ಕನ್ನಡಿಯಲ್ಲಿ ನೋಡಿಕೊಂಡಿರುವಷ್ಟೆ ಮುಖ್ಯವಾಗಿ ಅವರ ಪತಿ, ಮಕ್ಕಳು ಮತ್ತು ಮೊಮ್ಮಗಳ ಕಣ್ಣ ಕನ್ನಡಿಯಲ್ಲಿಯೂ ಕಂಡಿದ್ದಾರೆ. ಹೀಗಾಗಿ ಈ ಬರವಣಿಗೆ ಸ್ವ’ನೂ ಹೌದು
ಅನ್ಯ’ವೂ ಹೌದು.
-ಪಿ. ಚಂದ್ರಿಕಾ
ಅಧ್ಯಕ್ಷರು, `ಅವನಿ’