ಲೇಖಕರು: ಟಿ.ಪಿ. ಅಶೋಕ ಬೆಲೆ: 80/- ಪುಟಗಳು: 96 ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು. ..................... ಶ್ರೀ ಕೃಷ್ಣ ಆಲನಹಳ್ಳಿ ಅವರು ಆಧುನಿಕ ಕನ್ನಡ ಸಾಹಿತ್ಯದ ಅತ್ಯಂತ ವರ್ಣರಂಜಿತ ವ್ಯಕ್ತಿ ಮತ್ತು ಸಾಹಿತಿಗಳಲ್ಲಿ ಒಬ್ಬರು. ತಮ್ಮ ಸಾಹಿತ್ಯದಿಂದ ಹೇಗೋ ತಮ್ಮ ಪ್ರೀತಿ, ಜಗಳ, ಹರಟೆಗಳಿಂದಲೂ ಅವರು ಜನಪ್ರಿಯರಾಗಿದ್ದರು. ಅವರು ನವ್ಯಸಾಹಿತ್ಯ ಚಳುವಳಿ ಬಿರುಸಾಗಿದ್ದ ಕಾಲದಲ್ಲಿ ತಮ್ಮ ಬರವಣಿಗೆಯನ್ನು ಪ್ರಾರಂಭಿಸಿದರೂ ಕ್ರಮೇಣ ನವ್ಯದ ಪ್ರಭಾವದಿಂದ ಬಿಡಿಸಿಕೊಂಡು ತಮ್ಮದೇ ದನಿಯನ್ನು ಕಂಡುಕೊಂಡರು. ಅವರಿಗೆ ಎಲ್ಲ ಪೀಳಿಗೆಯ, ಮನೋಧರ್ಮದ ಸಾಹಿತಿಗಳು ಮತ್ತು ರಾಜಕಾರಣಿಗಳ ಒಡನಾಟವಿತ್ತು. ಅಡಿಗ-ಅನಂತಮೂರ್ತಿಯವರ ಹಾಗೆ ಕುವೆಂಪು ರಾವಬಹಾದ್ದೂರ್-ಪು.ತಿ.ನ. ಅವರುಗಳ ಸಾಹಿತ್ಯದ ಬಗ್ಗೆಯೂ ಅಪಾರವಾದ ಆಸಕ್ತಿ ಇತ್ತು. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಕುರಿತು ತುಂಬ ಚಿಕ್ಕ ವಯಸ್ಸಿನಲ್ಲಿಯೇ ಪ್ರಬುದ್ಧವಾದ ಲೇಖನವೊಂದನ್ನು ಅವರು ಪ್ರಕಟಿಸಿದ್ದರು. ಗ್ರಾಮಾಯಣ ಸಮೀಕ್ಷೆ ಎಂಬ ಲೇಖನಗಳ ಸಂಗ್ರಹವನ್ನು ಅವರು ಸಂಪಾದಿಸಿದ್ದರು. ಕೆಲಕಾಲ ಅವರು ಸಮೀಕ್ಷಕ ಎನ್ನುವ ಪತ್ರಿಕೆಯನ್ನೂ ನಡೆಸುತ್ತಿದ್ದರು. ವಯಸ್ಕ ಶಿಕ್ಷಣ ಸಮಿತಿ ಪ್ರಕಟಿಸುತ್ತಿದ್ದ ‘ಪುಸ್ತಕ ಪ್ರಪಂಚ’ ಎನ್ನುವ ಪತ್ರಿಕೆಯ ಸಂಪಾದಕರಾಗಿ ಅವರು ಆಲ್ಬರ್ಟ್ ಕಾಮು, ಡಾಸ್ಟವೆಸ್ಕಿ, ಚಿನುಅ ಅಚೆಬೆ ಮುಂತಾದ ಧೀಮಂತ ಲೇಖಕರನ್ನು ಕುರಿತಂತೆ ವಿಶೇಷ ಸಂಪುಟಗಳನ್ನು ಹೊರತಂದಿದ್ದರು. ಸಾಹಿತ್ಯ ಮತ್ತು ತತ್ವಶಾಸ್ತ್ರದ ಗಂಭೀರ ವಿದ್ಯಾರ್ಥಿಯಾಗಿದ್ದ ಶ್ರೀ ಕೃಷ್ಣ ಆಲನಹಳ್ಳಿ ತಮ್ಮ ಬರವಣಿಗೆಯ ಬಗ್ಗೆ ಅಪಾರ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದರು. ಯಾವ ಒಂದು ವೈಚಾರಿಕ ಇಲ್ಲವೆ ರಾಜಕೀಯ ಸಿದ್ಧಾಂತಕ್ಕೆ ತಮ್ಮನ್ನು ಕೊಟ್ಟುಕೊಳ್ಳದೆ ಎಲ್ಲದರ ಬಗ್ಗೆ ಮುಕ್ತದೃಷ್ಟಿಯನ್ನು ಇಟ್ಟುಕೊಂಡಿದ್ದರು. ಬಹಿರಂಗದಲ್ಲಿ ತುಂಬ ಲವಲವಿಕೆಯ ತುಂಟತನದ, ವ್ಯಾಮೋಹಿಯ ಇಮೇಜನ್ನು ಹೊಂದಿದ್ದರೂ ಅಂತರಂಗದ ಪಿಸುನುಡಿಗಳಿಗೆ ಅವರು ಕಿವುಡರಾಗಿರಲಿಲ್ಲ.
-ಟಿ.ಪಿ. ಅಶೋಕ (ಅರಿಕೆಯಿಂದ)