ಬೆಳಗೆರೆ ಕೃಷ್ಣ ಶಾಸ್ತ್ರಿ, ನಿರೂಪಣೆ: ನ. ರವಿಕುಮಾರ ಬೆಲೆ: 450/- ರಿಯಾಯಿತಿ: 10% ಅಭಿನವದ 50ನೇ ಪುಸ್ತಕ. 2004ರಿಂದ ಈವರೆಗೆ ಒಂಬತ್ತು ಮುದ್ರಣ ಕಂಡಿದೆ.
ಇದು ಅಭಿನವದ ಹೆಮ್ಮೆಯ ಪ್ರಕಟನೆಗಳಲ್ಲಿ ಒಂದು. ಇಂಥದೊಂದು ಕೃತಿಯನ್ನು ಪ್ರಕಟಿಸಲು ಸೂಚನೆ ಕೊಟ್ಟವರು ರವಿ ಬೆಳಗೆರೆ. ಎಲ್ಲ ರೀತಿಯಲ್ಲಿ ಸಹಕರಿಸಿದ್ದು ಬೆಳಗೆರೆ ಕೃಷ್ಣಶಾಸ್ತ್ರಿಗಳು ಮತ್ತು ಅವರ ಕುಟುಂಬ. ಪ್ರೋತ್ಸಾಹಿಸಿದ್ದು ಕನ್ನಡದ ಮನಸ್ಸುಗಳು.
ಇದ್ದಕ್ಕಿದ್ದಂತೆ ಕಳೆದ ವರ್ಷ ಒಬ್ಬ ಹಿರಿಯರು ಫೋನ್ ಮಾಡಿದರು. ಗೋಪಾಲಕೃಷ್ಣ ರಾಮನ್ ಎಂದು ಹೆಸರು. ಹಲವು ದೇಶಗಳನ್ನು ಸುತ್ತಿ ಬೆಂಗಳೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. "ನಿಮ್ಮನ್ನು ನೋಡಬೇಕು ಯಾವಾಗ ಬರಲಿ?" ಎಂದರು. "ಅಯ್ಯೋ ಅಷ್ಟು ದೊಡ್ಡ ವ್ಯಕ್ತಿ ನಾನಲ್ಲ. ನೀವಿರುವೆಡೆಗೆ ಬರುತ್ತೇನೆ" ಎಂದೆ. "ಇಲ್ಲ ನಾನೇ ಮೊದಲು ಬರುತ್ತೇನೆ. ಮರೆಯಲಾದೀತೆ ಓದಿದೆ. ನೀವು ಕೃಷ್ಣಶಾಸ್ತ್ರಿಗಳ ಜೊತೆಗೆ ಒಡನಾಟ ಇದ್ದವರು. ಅವರನ್ನಂತೂ ನೋಡಲಾಗಲಿಲ್ಲ. ನಿಮ್ಮನ್ನಾದರೂ ನೋಡುವ ಆಸೆ" ಎಂದರು. ಅವರ ಸ್ನೇಹಿತ ರಾಮಶೇಷ ಎನ್ನುವವರು ಈ ಪುಸ್ತಕ ಕೊಟ್ಟಿದ್ದರಂತೆ. ಅವರ ಪ್ರೀತಿ ದೊಡ್ಡದು. ಇದೊಂದು ಉದಾಹರಣೆ ಮಾತ್ರ. ಇಂಥ ದೂರವಾಣಿ ಕರೆಗಳು, ಪತ್ರಗಳು ದಿನಕ್ಕೊಂದರಂತೆ ಅಭ್ಯಾಸವಾಗಿಬಿಟ್ಟಿದೆ. ಶಾಸ್ತ್ರಿಗಳ ವ್ಯಕ್ತಿತ್ವ ಅಂಥದು. ರಾಮನ್ ಅವರು ಬಂದಾಗ ಶಾಸ್ತ್ರಿಗಳನ್ನು ಕುರಿತ ಕೆಲವು ಘಟನೆಗಳನ್ನು ಹೇಳಿದೆ. "ನೀವು ಇದನ್ನೆಲ್ಲ ಬರೆಯಬೇಕು" ಎಂದರು. "ಅವರಿಂದ ಅನುಮತಿಗಾಗಿ ಕಾಯುತ್ತಿದ್ದೇನೆ" ಎಂದೆ. "ಅವರ ಅನುಮತಿ ಇದ್ದೇ ಇರುತ್ತದೆ. ಇಲ್ಲದಿದ್ದರೆ ನೀವು ಹೀಗೆಲ್ಲ ಬರೆಯಲು ಸಾಧ್ಯವೇ ಆಗುತ್ತಿರಲಿಲ್ಲ... ಮೊದಲು ಬರೆಯಿರಿ" ಎಂದರು. ಕಾಲಕ್ಕಾಗಿ ಕಾಯುತ್ತಿದ್ದೇನೆ. ಈಚಿನ ದಿನಗಳಲ್ಲಿ ಕೆಲವು ಶಾಲೆಗಳಲ್ಲಿ ಈ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುತ್ತಿದ್ದಾರೆಂದು ಕೇಳಿದೆ. ನಿಜವಾಗಿ ಇದು ಶ್ಲಾಘನೀಯ ಕೆಲಸ. ಇದು ತಲುಪಬೇಕಾದದ್ದೂ ಮಕ್ಕಳಿಗೆ ಮತ್ತು ಮಕ್ಕಳಂಥ ಮನಸ್ಸಿರುವವರಿಗೆ. ಅವರ ಪ್ರೀತಿ ನನ್ನನ್ನು ಕಾಪಿಟ್ಟಿದೆ. ಎಲ್ಲರಿಗೂ ಮತ್ತೆ ನಮಸ್ಕಾರ.
-ನ. ರವಿಕುಮಾರ (ಅಭಿನವದ ಪರವಾಗಿ)