ನಿರೂಪಣೆ: ಪೃಥ್ವಿರಾಜ್ ಕವತ್ತಾರು ಬೆಲೆ: 200/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು ........................................ ಹಿಂದುಗಡೆ ಚಪ್ಪಟೆಯಾಗಿದ್ದು ರಸ್ತೆಯಲ್ಲಿ ರಾಜಮರ್ಜಿಯಲ್ಲಿ ಚಲಿಸುತ್ತಿದ್ದ ಕನಸಿನ ಪೆಟ್ಟಿಗೆಗಳಂತಿದ್ದ ಕಾರುಗಳನ್ನು ಮುಟ್ಟುವುದರಲ್ಲಿಯೇ ಮಜಾ ಅನುಭವಿಸುತ್ತಿದ್ದ ದಿನಗಳಲ್ಲಿ ಅದನ್ನು ಮನಸಾರೆ ಸವರಿ, ಉಜ್ಜಿ ಸಾಫ್ಗೊಳಿಸುವ ಅವಕಾಶ ಸಿಕ್ಕಿದರೆ ಯಾರು ಬೇಡವೆನ್ನುತ್ತಾರೆ! ಒಂದೂವರೆ ಕ್ಲಾಸ್ ಕಲಿತು ಶಾಲೆ ಬಿಟ್ಟು ಅಲ್ಲಿಲ್ಲಿ ಚಿಲ್ಲರೆ ಕೆಲಸ ಮಾಡುತ್ತ ಒಂದಾಣೆ ಸಂಪಾದಿಸುತ್ತಿದ್ದ ನನಗೆ ಈ ಕೆಲಸ ಬಾಲ್ಯದಾಟವೂ ಆಗಿ ಖುಷಿ ಕೊಟ್ಟಿತ್ತು. ಕಾರಿನ ಮುಚ್ಚಿದ ಕನ್ನಡಿಯೊಳಗೆ ಇಣುಕಿ ಅದರೊಳಗಿನ ಮೆತ್ತನೆ ಸೀಟುಗಳನ್ನು ಆಗಾಗ ನೋಡಿ ಆನಂದಿಸುತ್ತ ಅದರ ನುಣುಪಾದ ಮೈ ಮೇಲೆ ಕೈಯಾಡಿಸುತ್ತಲೇ ಎಷ್ಟೋ ದಿನ- ರಾತ್ರಿಗಳು ಸರಿದುಹೋಗಿದ್ದವು. ಮೂಡನಿಡಂಬೂರು ದೇವದಾಸಿಯರ ಕೇರಿಯಲ್ಲಿ ಸಂಜೆಯಾಗುತ್ತಿದ್ದಂತೆ ಸಾಲು ಸಾಲು ಕಾರುಗಳು. ಡ್ರೈವರ್ಗಳು ಸುಖದ ಕ್ಷಣಗಳನ್ನು ಅರಸಿಕೊಂಡು ಅಲ್ಲಿಗೆ ಹೋಗಿಬರುವಷ್ಟರಲ್ಲಿ ಅವರ ಕಾರುಗಳು ನಾನು ಮತ್ತು ನನ್ನಂಥ ಹುಡುಗರ ಉತ್ಸಾಹದಿಂದಾಗಿ ಫಳಫಳ ಹೊಳೆಯುತ್ತಿದ್ದವು. ಒಂದಾಣೆ ಅಂಗೈಗೆ ಬಿದ್ದಾಗ ನಮ್ಮ ಕಣ್ಣುಗಳೂ ಹೊಳೆಯುತ್ತಿದ್ದವು. ಅವರಿವರು ಕೊಟ್ಟ ಅಂಗಿ, ಚಡ್ಡಿಗಳು ಏಳೆಂಟು ವರ್ಷದ ನನ್ನ ಪುಟ್ಟ ದೇಹದ ಅಳತೆಗೆ ಹೊಂದುತ್ತಿರಲಿಲ್ಲ. ಅಂಗಿಯ ದಪ್ಪನೆಯ ಕೈಯನ್ನು ಮಡಚಿ ನಾನೇ ಹೊಲಿದು, ಚಡ್ಡಿಯ ಮೇಲೊಂದು ಹಗ್ಗವನ್ನು ಸೊಂಟದ ಸುತ್ತ ಸುತ್ತಿ ಕಟ್ಟಿ ಯಾವ ಕೆಲಸವನ್ನೂ ಮಾಡಬಲ್ಲೆನೆಂಬ ಉತ್ಸಾಹದಲ್ಲಿ ಹೊರಟು ನಿಲ್ಲುತ್ತಿದ್ದೆ. ಆಗಾಗ ಮೊಣಕೈಯಿಂದ ಕೆಳಗೆ ಜಾರಿ ಉಪದ್ರ ಕೊಡುತ್ತಿದ್ದ ಅಂಗಿಯನ್ನು ಬಿಚ್ಚಿ ಒಂದೆಡೆ ಇರಿಸಿ, ಚಡ್ಡಿಯನ್ನು ಮತ್ತೊಮ್ಮೆ ಬಿಗಿದು ಕಟ್ಟಿ, ಬಾಲ್ದಿಯೊಳಗೆ ನೀರು ತುಂಬಿ, ಅದರಲ್ಲಿ ಬಟ್ಟೆಯನ್ನು ಅದ್ದಿ ಯಾರದೋ ಕಾರಿನ ಮೈಯನ್ನು ಉಜ್ಜುತ್ತೇನೆ ಎಂಬಷ್ಟರಲ್ಲಿ... ದೂ...ರದಲ್ಲಿ ಏನೋ ಕೇಳಿಸಿದಂತಾಯಿತು. ಹೌದು! ಯಕ್ಷಗಾನದ ಚೆಂಡೆ. ಇನ್ನೂ ಎಲ್ಲ ಕತ್ತಲಾಗಿಲ್ಲ. ಯಕ್ಷಗಾನ ಇಷ್ಟು ಹೊತ್ತಿಗೆ ಎಲ್ಲಿ ಶುರುವಾಗುತ್ತದೆ! ಮತ್ತೆ ಕಿವಿಯರಳಿಸಿದೆ. ಚೆಂಡೆಯ ದನಿಯೇ. ಎಲ್ಲಿಂದ ಹೊಮ್ಮುತಿದೆ ಈ ನಾದ ? ಮರುಸಂಜೆಯೇ ಆ ದನಿಯ ಮೂಲವನ್ನು ಹುಡುಕಿಕೊಂಡು ಹೊರಟೇಬಿಟ್ಟೆ .... -(ಒಳಪುಟಗಳಿಂದ)