ಲೇಖಕರು: ಕಿಕ್ಕೇರಿ ನಾರಾಯಣ ಬೆಲೆ: 100/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು
ವಿಕೊ ಸಂರಚನಾವಾದ ಒಂದು ಸಿದ್ಧಾಂತವಾಗಬಹುದೆಂಬ ಹೊಳವನ್ನು The New Science ಎಂಬ ಪುಸ್ತಕ ಬರೆಯುವುದರ ಮೂಲಕ ಕ್ರಿ.ಶ. 1725ರಲ್ಲಿಯೇ ಹುಟ್ಟುಹಾಕಿದ. ಆದಿಮಾನವನು ಬಾಲಿಶವಾಗಿದ್ದ, ಮುಗ್ಧವಾಗಿದ್ದ ಎಂಬುದನ್ನು ಅವನು ತಿರಸ್ಕರಿಸಿದ; ಈ ಪ್ರಪಂಚಕ್ಕೆ ಆದಿಮಾನವ ‘ಕಾವ್ಯದ ಸ್ವರೂಪ’ದಲ್ಲಿ ಪ್ರತಿಕ್ರಿಯಿಸುತ್ತಿದ್ದನೆಂದೂ, ಈ ಜ್ಞಾನಕ್ಕೆ ‘ಕಾವ್ಯಜ್ಞಾನ’ (Poetic Wisdom) ಎಂದೂ ಕರೆದ. ಆದಿಮಾನವನ ಪ್ರತಿಕ್ರಿಯೆ ಆಧುನಿಕ ಮಾನವನ ಕ್ರಮದ್ದಾಗಿರದೆ ಮಿಥ್ಗಳ ಕ್ರಮದ್ದಾಗಿತ್ತು. ಕಾವ್ಯ ಪ್ರಜ್ಞೆಯ ಕ್ರಮದ್ದಾಗಿತ್ತು ಎಂದೂ ಅವನು ಪ್ರತಿಪಾದಿಸಿದ. ಈ ರೀತಿ ನೋಡಿದಾಗ ಮಿಥ್ಗಳು ಆದಿಮಾನವನ ಚರಿತ್ರೆಯಾಗಿರುತ್ತವೆ. ಮನುಷ್ಯ ತನ್ನ ಸುತ್ತುಮುತ್ತನ್ನು ಗ್ರಹಿಸುವುದು ತನ್ನ ಮಾನವ ತಿಳುವಳಿಕೆಯ ಮುದ್ರೆಯೊತ್ತುವುದರಿಂದ. ಹೀಗಾಗಿ ಮನುಷ್ಯನ ಮನಸ್ಸಿನಲ್ಲಿ ವಿಶ್ವದ ವಸ್ತುಗಳು ಜಾಗ ಪಡೆಯಬೇಕಾದರೆ ಆತ ಅವನ್ನು ಗ್ರಹಿಸಿಕೊಳ್ಳುತ್ತಿರುತ್ತಾನೆ. ಹೀಗೆ ಗ್ರಹಿಸಿಕೊಳ್ಳುವುದು ನಿಜವೂ ಸತ್ಯವೂ ಆಗಿರುತ್ತದೆ. ಈ ಗ್ರಹಿಕೆಯ ಕ್ರಮವೇ ಸಾಮಾಜಿಕ ಕಾವ್ಯವನ್ನು (Social Poetry) ಸೃಜಿಸುವ ಮನಸ್ಸು. ಈ ಮನಸ್ಸನ್ನೇ ಮಾನವಿಕಶಾಸ್ತ್ರ ಅಧ್ಯಯನ ಮಾಡಬೇಕಾದ್ದು. ಇದು ವಿಶ್ವದ ಎಲ್ಲ ಜನಾಂಗಗಳಲ್ಲೂ ಸಾಮಾನ್ಯ ಅಂಶ. ಒಮ್ಮೆ ಪ್ರಪಂಚ ಮಾನವನ ಮನಸ್ಸಿನಲ್ಲಿ ಮೂಲ ರಚನೆಯನ್ನು ಪಡೆದ ಮೇಲೆ ಮುಂದೆ ಅದು ಬದಲಾವಣೆಗೆ ಸಿದ್ಧವಾಗಿರುತ್ತದೆ. ಮಾನವತನ ಎಂಬುದು ಮಾನವ ನಿರ್ಮಿತ ಸಾಮಾಜಿಕ ಸಂಬಂಧ ಮತ್ತು ವ್ಯವಸ್ಥೆಯ ಮೇಲೆ ನಿಂತಿದೆ. ಮನಸ್ಸಿನ ಭಾಷೆ (Mental Language) ರೂಪ ತಳೆಯುವುದೇ ಮನುಷ್ಯನು ರಚನೆಗಳ ವ್ಯವಸ್ಥೆಯನ್ನು ಸೃಜಿಸುವ ಶಕ್ತಿಯಿಂದ. ಈ ಕಾವ್ಯಜ್ಞಾನವು ರಚನಾವಾದವನ್ನು ಅವಲಂಬಿಸಿರುತ್ತದೆ. ಈ ಅರ್ಥದಲ್ಲಿ ಮಾನವರೆಲ್ಲರೂ ‘ರಚನಾವಾದಿ’ಗಳೇ. ಸಮಗ್ರತೆ, ರೂಪಾಂತರಗೊಳ್ಳುವಿಕೆ, ಅಂತರ್ಗತ ನಿಯಮಗಳು ರಚನೆಯ ಮೂರು ಪ್ರಾಥಮಿಕ ಗುಣಗಳು. -ಕಿಕ್ಕೇರಿ ನಾರಾಯಣ (ಒಳಪುಟಗಳಿಂದ)